Loading date... | Loading Hijri date... | Loading time...

الفرقان

ಕನ್ನಡ Translation with Arabic Quran Text

ಕನ್ನಡ العربية
1 ಸತ್ಯಾಸತ್ಯ ವಿವೇಚಕ ಗ್ರಂಥವನ್ನು (ಕುರ್‌ಆನನ್ನು) ತನ್ನ ದಾಸನಿಗೆ (ಪ್ರವಾದಿಗೆ)—ಅವರು ಸರ್ವಲೋಕದವರಿಗೆ ಒಬ್ಬ ಮುನ್ನೆಚ್ಚರಿಕೆಗಾರನಾಗಲೆಂದು—ಅವತೀರ್ಣಗೊಳಿಸಿದ ಅಲ್ಲಾಹು ಸಮೃದ್ಧಪೂರ್ಣನಾಗಿದ್ದಾನೆ. تَبَارَكَ ٱلَّذِى نَزَّلَ ٱلْفُرْقَانَ عَلَىٰ عَبْدِهِۦ لِيَكُونَ لِلْعَٰلَمِينَ نَذِيرًا. ﴿1﴾
2 ಅಂದರೆ ಭೂಮ್ಯಾಕಾಶಗಳ ಸಾರ್ವಭೌಮತ್ವವು ಯಾರಿಗೆ ಸೇರಿದೆಯೋ ಅವನು. ಅವನಿಗೆ ಯಾವುದೇ ಮಕ್ಕಳಿಲ್ಲ. ಸಾರ್ವಭೌಮತ್ವದಲ್ಲಿ ಅವನೊಂದಿಗೆ ಯಾವುದೇ ಸಹಭಾಗಿಗಳಿಲ್ಲ. ಅವನು ಎಲ್ಲಾ ವಸ್ತುಗಳನ್ನೂ ಸೃಷ್ಟಿಸಿ ಅದಕ್ಕೆ ನಿಖರವಾದ ನಿರ್ಣಯವನ್ನು ನಿಶ್ಚಯಿಸಿದ್ದಾನೆ. ٱلَّذِى لَهُۥ مُلْكُ ٱلسَّمَٰوَٰتِ وَٱلْأَرْضِ وَلَمْ يَتَّخِذْ وَلَدًۭا وَلَمْ يَكُن لَّهُۥ شَرِيكٌۭ فِى ٱلْمُلْكِ وَخَلَقَ كُلَّ شَىْءٍۢ فَقَدَّرَهُۥ تَقْدِيرًۭا. ﴿2﴾
3 ಅವರು ಅವನನ್ನು ಬಿಟ್ಟು ಬೇರೆ ದೇವರುಗಳನ್ನು ಸ್ವೀಕರಿಸಿದ್ದಾರೆ. ಆದರೆ, ಆ ದೇವರುಗಳು ಯಾವುದೇ ವಸ್ತುವನ್ನು ಸೃಷ್ಟಿಸುವುದಿಲ್ಲ. ವಾಸ್ತವವಾಗಿ ಅವರೇ ಸೃಷ್ಟಿಗಳು. ಸ್ವಯಂ ತಮಗೂ ಕೂಡ ಯಾವುದೇ ತೊಂದರೆ ಅಥವಾ ಉಪಕಾರವನ್ನು ಮಾಡುವ ಸಾಮರ್ಥ್ಯವನ್ನು ಅವರು ಹೊಂದಿಲ್ಲ. ಮರಣ, ಜೀವನ, ಪುನರುತ್ಥಾನ ಮುಂತಾದ ಯಾವುದೂ ಅವರ ವಶದಲ್ಲಿಲ್ಲ. وَٱتَّخَذُوا۟ مِن دُونِهِۦٓ ءَالِهَةًۭ لَّا يَخْلُقُونَ شَيْـًۭٔا وَهُمْ يُخْلَقُونَ وَلَا يَمْلِكُونَ لِأَنفُسِهِمْ ضَرًّۭا وَلَا نَفْعًۭا وَلَا يَمْلِكُونَ مَوْتًۭا وَلَا حَيَوٰةًۭ وَلَا نُشُورًۭا. ﴿3﴾
4 ಸತ್ಯನಿಷೇಧಿಗಳು ಹೇಳಿದರು: “ಈ ಕುರ್‌ಆನ್ ಸುಳ್ಳಿನ ಕಂತೆಯಾಗಿದೆ. ಅವನು (ಪ್ರವಾದಿ) ಇದನ್ನು ಸ್ವಯಂ ರಚಿಸಿದ್ದಾನೆ. ಬೇರೆ ಕೆಲವರು ಕೂಡ ಅದಕ್ಕೆ ಸಹಾಯ ಮಾಡಿದ್ದಾರೆ.” ಇವರು ಮಹಾ ಅನ್ಯಾಯವನ್ನು ಮತ್ತು ಸುಳ್ಳಾರೋಪವನ್ನು ಮಾಡಿದ್ದಾರೆ. وَقَالَ ٱلَّذِينَ كَفَرُوٓا۟ إِنْ هَٰذَآ إِلَّآ إِفْكٌ ٱفْتَرَىٰهُ وَأَعَانَهُۥ عَلَيْهِ قَوْمٌ ءَاخَرُونَ ۖ فَقَدْ جَآءُو ظُلْمًۭا وَزُورًۭا. ﴿4﴾
5 ಅವರು ಹೇಳಿದರು: “ಇದು ಪ್ರಾಚೀನ ಕಾಲದ ಜನರ ಪುರಾಣಗಳು. ಅವನು (ಪ್ರವಾದಿ) ಇದನ್ನು ಸ್ವಯಂ ಬರೆಯುತ್ತಿದ್ದಾನೆ. ಮುಂಜಾನೆ ಮತ್ತು ಸಂಜೆ ಅವನಿಗೆ ಇದನ್ನು ಓದಿಕೊಡಲಾಗುತ್ತಿದೆ.” وَقَالُوٓا۟ أَسَٰطِيرُ ٱلْأَوَّلِينَ ٱكْتَتَبَهَا فَهِىَ تُمْلَىٰ عَلَيْهِ بُكْرَةًۭ وَأَصِيلًۭا. ﴿5﴾
6 ಹೇಳಿರಿ: “ಭೂಮ್ಯಾಕಾಶಗಳಲ್ಲಿರುವ ರಹಸ್ಯಗಳನ್ನು ತಿಳಿದವನೇ ಇದನ್ನು ಅವತೀರ್ಣಗೊಳಿಸಿದ್ದಾನೆ. ನಿಶ್ಚಯವಾಗಿಯೂ ಅವನು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.” قُلْ أَنزَلَهُ ٱلَّذِى يَعْلَمُ ٱلسِّرَّ فِى ٱلسَّمَٰوَٰتِ وَٱلْأَرْضِ ۚ إِنَّهُۥ كَانَ غَفُورًۭا رَّحِيمًۭا. ﴿6﴾
7 ಅವರು ಹೇಳುತ್ತಾರೆ: “ಇವನೆಂತಹ ಪ್ರವಾದಿ? ಇವನು ಆಹಾರ ಸೇವಿಸುತ್ತಾನೆ ಮತ್ತು ಪೇಟೆಗಳಲ್ಲಿ ಸಂಚರಿಸುತ್ತಾನೆ. ಇವನ ಜೊತೆಗೆ ಒಬ್ಬ ದೇವದೂತನನ್ನು ಏಕೆ ಕಳುಹಿಸಲಾಗಿಲ್ಲ? ಅವನು ಕೂಡ ಇವನ ಜೊತೆಗೆ ಸೇರಿ ಮುನ್ನೆಚ್ಚರಿಕೆ ನೀಡಬಹುದಿತ್ತಲ್ಲವೇ? وَقَالُوا۟ مَالِ هَٰذَا ٱلرَّسُولِ يَأْكُلُ ٱلطَّعَامَ وَيَمْشِى فِى ٱلْأَسْوَاقِ ۙ لَوْلَآ أُنزِلَ إِلَيْهِ مَلَكٌۭ فَيَكُونَ مَعَهُۥ نَذِيرًا. ﴿7﴾
8 ಅಥವಾ ಇವನ ಬಳಿ ಒಂದು ನಿಧಿಯನ್ನು ಏಕೆ ಹಾಕಿಲ್ಲ? ಅಥವಾ ಇವನಿಗೆ ಹಣ್ಣುಗಳನ್ನು ತಿನ್ನಲು ಒಂದು ತೋಟವನ್ನು ಏಕೆ ಕೊಡಲಾಗಿಲ್ಲ?” ಆ ಅಕ್ರಮಿಗಳು ಹೇಳಿದರು: “ನೀವು ಮಾಟ ಮಾಡಲಾದ ವ್ಯಕ್ತಿಯನ್ನೇ ಅನುಸರಿಸುತ್ತಿದ್ದೀರಿ.” أَوْ يُلْقَىٰٓ إِلَيْهِ كَنزٌ أَوْ تَكُونُ لَهُۥ جَنَّةٌۭ يَأْكُلُ مِنْهَا ۚ وَقَالَ ٱلظَّٰلِمُونَ إِن تَتَّبِعُونَ إِلَّا رَجُلًۭا مَّسْحُورًا. ﴿8﴾
9 ನೋಡಿ! ಅವರು ನಿಮ್ಮ ಬಗ್ಗೆ ಹೇಗೆಲ್ಲಾ ಮಾತನಾಡುತ್ತಿದ್ದಾರೆಂದು. Fದರಿಂದ ಸ್ವತಃ ಅವರೇ ದಾರಿತಪ್ಪುತ್ತಿದ್ದಾರೆ. ಅವರಿಗೆ ಯಾವುದೇ ರೀತಿಯಲ್ಲೂ ಸರಿದಾರಿಗೆ ಬರಲು ಸಾಧ್ಯವಾಗುವುದಿಲ್ಲ. ٱنظُرْ كَيْفَ ضَرَبُوا۟ لَكَ ٱلْأَمْثَٰلَ فَضَلُّوا۟ فَلَا يَسْتَطِيعُونَ سَبِيلًۭا. ﴿9﴾
10 ಅಲ್ಲಾಹು ಸಮೃದ್ಧಪೂರ್ಣನು. ಅವನು ಇಚ್ಛಿಸಿದರೆ ನಿಮಗೆ ಅವರು ಹೇಳುವುದಕ್ಕಿಂತಲೂ ಶ್ರೇಷ್ಠವಾದುದನ್ನು, ಅಂದರೆ ತಳಭಾಗದಲ್ಲಿ ನದಿಗಳು ಹರಿಯುವ ತೋಟಗಳನ್ನು ದಯಪಾಲಿಸುವನು ಮತ್ತು ನಿಮಗೆ ಮಹಾ ಸೌಧಗಳನ್ನು ದಯಪಾಲಿಸುವನು. تَبَارَكَ ٱلَّذِىٓ إِن شَآءَ جَعَلَ لَكَ خَيْرًۭا مِّن ذَٰلِكَ جَنَّٰتٍۢ تَجْرِى مِن تَحْتِهَا ٱلْأَنْهَٰرُ وَيَجْعَل لَّكَ قُصُورًۢا. ﴿10﴾
11 ಆದರೆ, ಅವರು ಅಂತ್ಯಸಮಯವನ್ನು ನಿಷೇಧಿಸಿದರು. ಅಂತ್ಯಸಮಯವನ್ನು ನಿಷೇಧಿಸಿದವರಿಗೆ ನಾವು ಧಗಧಗಿಸುವ ನರಕಾಗ್ನಿಯನ್ನು ಸಿದ್ಧಗೊಳಿಸಿದ್ದೇವೆ. بَلْ كَذَّبُوا۟ بِٱلسَّاعَةِ ۖ وَأَعْتَدْنَا لِمَن كَذَّبَ بِٱلسَّاعَةِ سَعِيرًا. ﴿11﴾
12 ಅದು ಅವರನ್ನು ವಿದೂರ ಸ್ಥಳದಿಂದ ನೋಡುವಾಗಲೇ, ಅದು ರೋಷಾವೇಶದಿಂದ ಆರ್ಭಟಿಸುವುದನ್ನು ಅವರು ಕೇಳುವರು. إِذَا رَأَتْهُم مِّن مَّكَانٍۭ بَعِيدٍۢ سَمِعُوا۟ لَهَا تَغَيُّظًۭا وَزَفِيرًۭا. ﴿12﴾
13 ಅವರನ್ನು ಸಂಕೋಲೆಗಳಿಂದ ಬಂಧಿಸಿ ನರಕದ ಒಂದು ಇಕ್ಕಟ್ಟಾದ ಸ್ಥಳದಲ್ಲಿ ಎಸೆಯಲಾದರೆ ಅವರು ಅಲ್ಲಿ ವಿನಾಶವನ್ನು ಕೂಗಿ ಕರೆಯುವರು. وَإِذَآ أُلْقُوا۟ مِنْهَا مَكَانًۭا ضَيِّقًۭا مُّقَرَّنِينَ دَعَوْا۟ هُنَالِكَ ثُبُورًۭا. ﴿13﴾
14 (ಅವರೊಡನೆ ಹೇಳಲಾಗುವುದು).“ಇಂದು ನೀವು ಒಂದು ವಿನಾಶವನ್ನು ಕೂಗಿ ಕರೆಯಬೇಡಿ. ಹಲವಾರು ವಿನಾಶಗಳನ್ನು ಕೂಗಿ ಕರೆಯಿರಿ.” لَّا تَدْعُوا۟ ٱلْيَوْمَ ثُبُورًۭا وَٰحِدًۭا وَٱدْعُوا۟ ثُبُورًۭا كَثِيرًۭا. ﴿14﴾
15 ಹೇಳಿರಿ: “ಅದು ಶ್ರೇಷ್ಠವೇ? ಅಥವಾ ದೇವಭಯವುಳ್ಳವರಿಗೆ ವಾಗ್ದಾನ ಮಾಡಲಾದ ಶಾಶ್ವತ ಸ್ವರ್ಗವು ಶ್ರೇಷ್ಠವೇ?” ಅದು ಅವರಿಗೆ ನೀಡಲಾಗುವ ಪ್ರತಿಫಲ ಮತ್ತು ಅವರ ಗಮ್ಯಸ್ಥಾನವಾಗಿದೆ. قُلْ أَذَٰلِكَ خَيْرٌ أَمْ جَنَّةُ ٱلْخُلْدِ ٱلَّتِى وُعِدَ ٱلْمُتَّقُونَ ۚ كَانَتْ لَهُمْ جَزَآءًۭ وَمَصِيرًۭا. ﴿15﴾
16 ಅವರಿಗೆ ಅಲ್ಲಿ ಅವರು ಇಚ್ಛಿಸುವುದೆಲ್ಲವೂ ದೊರೆಯುತ್ತದೆ. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುತ್ತಾರೆ. ಅದು ನಿಮ್ಮ ಪರಿಪಾಲಕನ (ಅಲ್ಲಾಹನ) ಉತ್ತರದಾಯಿತ್ವವಿರುವ ವಾಗ್ದಾನವಾಗಿದೆ. لَّهُمْ فِيهَا مَا يَشَآءُونَ خَٰلِدِينَ ۚ كَانَ عَلَىٰ رَبِّكَ وَعْدًۭا مَّسْـُٔولًۭا. ﴿16﴾
17 ಅವನು ಅವರನ್ನು ಮತ್ತು ಅಲ್ಲಾಹನನ್ನು ಬಿಟ್ಟು ಅವರು ಆರಾಧಿಸುತ್ತಿದ್ದ ದೇವರುಗಳನ್ನು ಒಟ್ಟುಗೂಡಿಸುವ ದಿನ! ಅವನು (ಆ ದೇವರುಗಳೊಡನೆ) ಕೇಳುವನು: “ನನ್ನ ಈ ದಾಸರನ್ನು ದಾರಿತಪ್ಪಿಸಿದ್ದು ನೀವೋ? ಅಥವಾ ಸ್ವತಃ ಅವರೇ ದಾರಿತಪ್ಪಿದರೋ?” وَيَوْمَ يَحْشُرُهُمْ وَمَا يَعْبُدُونَ مِن دُونِ ٱللَّهِ فَيَقُولُ ءَأَنتُمْ أَضْلَلْتُمْ عِبَادِى هَٰٓؤُلَآءِ أَمْ هُمْ ضَلُّوا۟ ٱلسَّبِيلَ. ﴿17﴾
18 ಅವರು (ದೇವರುಗಳು) ಹೇಳುವರು: “ನೀನು ಪರಿಶುದ್ಧನು! ನಿನ್ನನ್ನು ಬಿಟ್ಟು ಬೇರೆಯವರನ್ನು ರಕ್ಷಕರಾಗಿ ಸ್ವೀಕರಿಸುವುದು ನಮಗೆ ಯೋಗ್ಯವಲ್ಲ. ಆದರೆ ನೀನು ಅವರಿಗೆ ಮತ್ತು ಅವರ ಪೂರ್ವಜರಿಗೆ ಸವಲತ್ತುಗಳನ್ನು ದಯಪಾಲಿಸಿದೆ. ಎಲ್ಲಿಯವರೆಗೆಂದರೆ ಅವರು ಉಪದೇಶವನ್ನು ಸಂಪೂರ್ಣ ಮರೆತು, ನಾಶವಾಗಿ ಹೋದ ಒಂದು ಜನತೆಯಾಗಿ ಮಾರ್ಪಡುವ ತನಕ.” قَالُوا۟ سُبْحَٰنَكَ مَا كَانَ يَنۢبَغِى لَنَآ أَن نَّتَّخِذَ مِن دُونِكَ مِنْ أَوْلِيَآءَ وَلَٰكِن مَّتَّعْتَهُمْ وَءَابَآءَهُمْ حَتَّىٰ نَسُوا۟ ٱلذِّكْرَ وَكَانُوا۟ قَوْمًۢا بُورًۭا. ﴿18﴾
19 (ಅಲ್ಲಾಹು ಬಹುದೇವಾರಾಧಕರೊಡನೆ ಹೇಳುವನು): “ನೀವು ಏನು ಹೇಳುತ್ತಿದ್ದಿರೋ ಅದನ್ನು ಅವರು (ದೇವರುಗಳು) ನಿಷೇಧಿಸಿದ್ದಾರೆ. ಇನ್ನು ಶಿಕ್ಷೆಯನ್ನು ದೂರೀಕರಿಸಲು ಅಥವಾ ಯಾವುದೇ ಸಹಾಯ ಪಡೆಯಲು ನಿಮಗೆ ಸಾಧ್ಯವಿಲ್ಲ. ನಿಮ್ಮಲ್ಲಿ ಅಕ್ರಮವೆಸಗಿದವನು[1] ಯಾರೋ ಅವನಿಗೆ ನಾವು ಮಹಾ ಶಿಕ್ಷೆಯ ರುಚಿಯನ್ನು ತೋರಿಸುವೆವು.”
[1] ಅಂದರೆ ದೇವ ಸಹಭಾಗಿತ್ವ (ಶಿರ್ಕ್) ಮಾಡಿದವನು.
فَقَدْ كَذَّبُوكُم بِمَا تَقُولُونَ فَمَا تَسْتَطِيعُونَ صَرْفًۭا وَلَا نَصْرًۭا ۚ وَمَن يَظْلِم مِّنكُمْ نُذِقْهُ عَذَابًۭا كَبِيرًۭا. ﴿19﴾
20 (ಪ್ರವಾದಿಯವರೇ) ನಾವು ನಿಮಗಿಂತ ಮೊದಲು ಕಳುಹಿಸಿದ ಸಂದೇಶವಾಹಕರೆಲ್ಲರೂ ಆಹಾರವನ್ನು ಸೇವಿಸುತ್ತಿದ್ದರು ಮತ್ತು ಪೇಟೆಗಳಲ್ಲಿ ಸಂಚರಿಸುತ್ತಿದ್ದರು. ನಾವು ನಿಮ್ಮಲ್ಲಿ ಒಬ್ಬರನ್ನು ಇನ್ನೊಬ್ಬರಿಗೆ ಪರೀಕ್ಷೆಯನ್ನಾಗಿ ಮಾಡಿದ್ದೇವೆ. ನೀವು ತಾಳ್ಮೆಯಿಂದಿರುತ್ತೀರೋ ಎಂದು ನೋಡಲು. ನಿಮ್ಮ ಪರಿಪಾಲಕನು ಎಲ್ಲವನ್ನೂ ನೋಡುವವನಾಗಿದ್ದಾನೆ. وَمَآ أَرْسَلْنَا قَبْلَكَ مِنَ ٱلْمُرْسَلِينَ إِلَّآ إِنَّهُمْ لَيَأْكُلُونَ ٱلطَّعَامَ وَيَمْشُونَ فِى ٱلْأَسْوَاقِ ۗ وَجَعَلْنَا بَعْضَكُمْ لِبَعْضٍۢ فِتْنَةً أَتَصْبِرُونَ ۗ وَكَانَ رَبُّكَ بَصِيرًۭا. ﴿20﴾
21 ನಮ್ಮನ್ನು ಭೇಟಿಯಾಗುವ ನಿರೀಕ್ಷೆಯಿಲ್ಲದವರು ಹೇಳಿದರು: “ನಮ್ಮ ಮೇಲೆ ದೇವದೂತರುಗಳನ್ನು ಏಕೆ ಇಳಿಸಲಾಗುವುದಿಲ್ಲ? ಅಥವಾ ನಮಗೇಕೆ ನಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ನೇರವಾಗಿ ನೋಡಲಾಗುವುದಿಲ್ಲ?” ಅವರು ಸ್ವಯಂ ಅವರ ಬಗ್ಗೆಯೇ ಅಹಂಕಾರಪಡುತ್ತಿದ್ದಾರೆ ಮತ್ತು ಕಡು ಧಿಕ್ಕಾರದಿಂದ ವರ್ತಿಸುತ್ತಿದ್ದಾರೆ. ۞ وَقَالَ ٱلَّذِينَ لَا يَرْجُونَ لِقَآءَنَا لَوْلَآ أُنزِلَ عَلَيْنَا ٱلْمَلَٰٓئِكَةُ أَوْ نَرَىٰ رَبَّنَا ۗ لَقَدِ ٱسْتَكْبَرُوا۟ فِىٓ أَنفُسِهِمْ وَعَتَوْ عُتُوًّۭا كَبِيرًۭا. ﴿21﴾
22 ಅವರು ದೇವದೂತರುಗಳನ್ನು ನೋಡುವ ದಿನ![1] ಅಂದು ಅಪರಾಧಿಗಳಿಗೆ ಯಾವುದೇ ಸಿಹಿ ಸುದ್ದಿಯಿರುವುದಿಲ್ಲ. ಅವರು (ದೇವದೂತರುಗಳು) ಹೇಳುವರು: “ನಿಷಿದ್ಧವಾಗಿದೆ! ನಿಮಗೆ ಎಲ್ಲವನ್ನೂ ನಿಷೇಧಿಸಲಾಗಿದೆ!”[2]
[1] ಅಂದರೆ ಅವರು ಸಾವನ್ನಪ್ಪುವ ದಿನ. ಆಗ ಅವರು ದೇವದೂತರುಗಳನ್ನು ಕಣ್ಣಾರೆ ನೋಡುತ್ತಾರೆ. ಅದು ಅವರಿಗೆ ಖುಷಿ ಅಥವಾ ಸಂತೋಷದ ದಿನವಾಗಿರುವುದಿಲ್ಲ. [2] ಅಂದರೆ ನಿಮಗೆ ಸ್ವರ್ಗವು ನಿಷಿದ್ಧವಾಗಿದೆ ಮತ್ತು ಸತ್ಯವಿಶ್ವಾಸಿಗಳಿಗೆ ಸಿಗುವ ಸುಖ-ಸಂತೋಷಗಳೆಲ್ಲವೂ ನಿಮಗೆ ನಿಷೇಧಿಸಲಾಗಿದೆ.
يَوْمَ يَرَوْنَ ٱلْمَلَٰٓئِكَةَ لَا بُشْرَىٰ يَوْمَئِذٍۢ لِّلْمُجْرِمِينَ وَيَقُولُونَ حِجْرًۭا مَّحْجُورًۭا. ﴿22﴾
23 ಅವರು ಮಾಡಿದ ಕರ್ಮಗಳ ಬಳಿಗೆ ತೆರಳಿ ನಾವು ಅವುಗಳನ್ನು ಚದುರಿದ ಧೂಳಿಯಂತೆ ಮಾಡುವೆವು. وَقَدِمْنَآ إِلَىٰ مَا عَمِلُوا۟ مِنْ عَمَلٍۢ فَجَعَلْنَٰهُ هَبَآءًۭ مَّنثُورًا. ﴿23﴾
24 ಅಂದು ಸ್ವರ್ಗವಾಸಿಗಳು ಅತ್ಯುತ್ತಮ ವಾಸಸ್ಥಳಗಳನ್ನು ಮತ್ತು ಅತ್ಯುತ್ತಮ ವಿಶ್ರಾಂತಿಧಾಮಗಳನ್ನು ಹೊಂದಿರುವರು. أَصْحَٰبُ ٱلْجَنَّةِ يَوْمَئِذٍ خَيْرٌۭ مُّسْتَقَرًّۭا وَأَحْسَنُ مَقِيلًۭا. ﴿24﴾
25 ಆಕಾಶವು ಮೋಡಗಳ ಸಹಿತ ಒಡೆದು ಛಿದ್ರವಾಗುವ ಮತ್ತು ದೇವದೂತರುಗಳನ್ನು ನಿರಂತರವಾಗಿ ಇಳಿಸಲಾಗುವ ದಿನ! وَيَوْمَ تَشَقَّقُ ٱلسَّمَآءُ بِٱلْغَمَٰمِ وَنُزِّلَ ٱلْمَلَٰٓئِكَةُ تَنزِيلًا. ﴿25﴾
26 ಅಂದು ನಿಜವಾದ ಸಾರ್ವಭೌಮತ್ವವು ಪರಮ ದಯಾಳುವಾದ ಅಲ್ಲಾಹನಿಗೆ ಮಾತ್ರ. ಅದು ಸತ್ಯನಿಷೇಧಿಗಳಿಗೆ ಸಂಬಂಧಿಸಿದಂತೆ ಅತ್ಯಂತ ದುಷ್ಕರ ದಿನವಾಗಿದೆ. ٱلْمُلْكُ يَوْمَئِذٍ ٱلْحَقُّ لِلرَّحْمَٰنِ ۚ وَكَانَ يَوْمًا عَلَى ٱلْكَٰفِرِينَ عَسِيرًۭا. ﴿26﴾
27 ಅಂದು ಅಕ್ರಮವೆಸಗಿದವನು ತನ್ನ ಕೈಗಳನ್ನು ಕಚ್ಚುತ್ತಾ ಹೇಳುವನು: “ನಾನು ಸಂದೇಶವಾಹಕರ ಮಾರ್ಗವನ್ನು ಆರಿಸುತ್ತಿದ್ದರೆ ಎಷ್ಟು ಚೆನ್ನಾಗಿತ್ತು! وَيَوْمَ يَعَضُّ ٱلظَّالِمُ عَلَىٰ يَدَيْهِ يَقُولُ يَٰلَيْتَنِى ٱتَّخَذْتُ مَعَ ٱلرَّسُولِ سَبِيلًۭا. ﴿27﴾
28 ಅಯ್ಯೋ ನನ್ನ ದುರ್ಗತಿಯೇ! ನಾನು ಇವನನ್ನು ಮಿತ್ರನಾಗಿ ಸ್ವೀಕರಿಸದಿದ್ದರೆ ಎಷ್ಟು ಚೆನ್ನಾಗಿತ್ತು! يَٰوَيْلَتَىٰ لَيْتَنِى لَمْ أَتَّخِذْ فُلَانًا خَلِيلًۭا. ﴿28﴾
29 ನನ್ನ ಬಳಿಗೆ ಉಪದೇಶವು ಬಂದ ಬಳಿಕವೂ ಅವನು ನನ್ನನ್ನು ಅದರಿಂದ ತಪ್ಪಿಸಿದನು.” ಶೈತಾನನು ಮಾನವನಿಗೆ ದ್ರೋಹವೆಸಗುವವನೇ ಆಗಿದ್ದಾನೆ. لَّقَدْ أَضَلَّنِى عَنِ ٱلذِّكْرِ بَعْدَ إِذْ جَآءَنِى ۗ وَكَانَ ٱلشَّيْطَٰنُ لِلْإِنسَٰنِ خَذُولًۭا. ﴿29﴾
30 ಸಂದೇಶವಾಹಕರು ಹೇಳುವರು: “ನನ್ನ ಪರಿಪಾಲಕನೇ, ನಿಶ್ಚಯವಾಗಿಯೂ ನನ್ನ ಸಮುದಾಯವು ಈ ಕುರ್‌ಆನನ್ನು ತೊರೆದು ಬಿಟ್ಟಿದೆ.” وَقَالَ ٱلرَّسُولُ يَٰرَبِّ إِنَّ قَوْمِى ٱتَّخَذُوا۟ هَٰذَا ٱلْقُرْءَانَ مَهْجُورًۭا. ﴿30﴾
31 ಈ ರೀತಿ ನಾವುಎಲ್ಲಾ ಸಂದೇಶವಾಹಕರಿಗೂ ಕೆಲವು ಅಪರಾಧಿಗಳನ್ನು ಶತ್ರುಗಳಾಗಿ ಮಾಡಿದ್ದೇವೆ. ಸನ್ಮಾರ್ಗ ತೋರಿಸಲು ಮತ್ತು ಸಹಾಯ ಮಾಡಲು ನಿಮ್ಮ ಪರಿಪಾಲಕನೇ (ಅಲ್ಲಾಹನೇ) ಸಾಕು! وَكَذَٰلِكَ جَعَلْنَا لِكُلِّ نَبِىٍّ عَدُوًّۭا مِّنَ ٱلْمُجْرِمِينَ ۗ وَكَفَىٰ بِرَبِّكَ هَادِيًۭا وَنَصِيرًۭا. ﴿31﴾
32 ಸತ್ಯನಿಷೇಧಿಗಳು ಕೇಳಿದರು: “ಕುರ್‌ಆನನ್ನು ಒಮ್ಮೆಲೇ ಸಂಪೂರ್ಣವಾಗಿ ಏಕೆ ಇಳಿಸಲಾಗಿಲ್ಲ?” ನಾವು ಈ ರೀತಿಯಲ್ಲಿ (ಹಂತ ಹಂತವಾಗಿ ಇಳಿಸಿದ್ದು ಏಕೆಂದರೆ) ಅದರ ಮೂಲಕ ನಿಮ್ಮ ಹೃದಯವನ್ನು ದೃಢವಾಗಿ ನಿಲ್ಲಿಸಲು. ನಾವು ಅದನ್ನು ಸ್ವಲ್ಪ ಸ್ವಲ್ಪವಾಗಿಯೇ ಪಠಿಸಿಕೊಡುತ್ತೇವೆ. وَقَالَ ٱلَّذِينَ كَفَرُوا۟ لَوْلَا نُزِّلَ عَلَيْهِ ٱلْقُرْءَانُ جُمْلَةًۭ وَٰحِدَةًۭ ۚ كَذَٰلِكَ لِنُثَبِّتَ بِهِۦ فُؤَادَكَ ۖ وَرَتَّلْنَٰهُ تَرْتِيلًۭا. ﴿32﴾
33 ಅವರು ನಿಮ್ಮ ಬಳಿಗೆ ಯಾವುದೇ ಉದಾಹರಣೆಯನ್ನು ತಂದರೂ, ನಾವು ಅದರ ನಿಜವಾದ ಉತ್ತರವನ್ನು ಮತ್ತು ಅತ್ಯುತ್ತಮ ವಿವರಣೆಯನ್ನು ಖಂಡಿತ ತರುವೆವು.[1]
[1] ಕುರ್‌ಆನನ್ನು ಹಂತ ಹಂತವಾಗಿ ಇಳಿಸಿರುವುದರ ಹಿಂದಿರುವ ಇನ್ನೊಂದು ಜಾಣ್ಮೆಯೇನೆಂದರೆ, ಸತ್ಯನಿಷೇಧಿಗಳು ಯಾವುದೇ ತರ್ಕದೊಂದಿಗೆ ಬಂದರೂ ಅದಕ್ಕೆ ಕುರ್‌ಆನಿನ ಮೂಲಕವೇ ಸೂಕ್ತ ಮತ್ತು ಸ್ಪಷ್ಟ ಉತ್ತರವನ್ನು ನೀಡಲಾಗುತ್ತದೆ.
وَلَا يَأْتُونَكَ بِمَثَلٍ إِلَّا جِئْنَٰكَ بِٱلْحَقِّ وَأَحْسَنَ تَفْسِيرًا. ﴿33﴾
34 ಯಾರನ್ನು ಮುಖಗಳ ಮೇಲೆ ನರಕಕ್ಕೆ ಒಟ್ಟುಗೂಡಿಸಲಾಗುತ್ತದೋ ಅವರೇ ಅತಿ ನಿಕೃಷ್ಟ ಸ್ಥಳದಲ್ಲಿರುವವರು ಮತ್ತು ಅತ್ಯಧಿಕ ದಾರಿತಪ್ಪಿದವರು. ٱلَّذِينَ يُحْشَرُونَ عَلَىٰ وُجُوهِهِمْ إِلَىٰ جَهَنَّمَ أُو۟لَٰٓئِكَ شَرٌّۭ مَّكَانًۭا وَأَضَلُّ سَبِيلًۭا. ﴿34﴾
35 ನಾವು ಮೂಸಾರಿಗೆ ಗ್ರಂಥವನ್ನು ನೀಡಿದೆವು ಮತ್ತು ಅವರ ಸಹೋದರ ಹಾರೂನರನ್ನು ಅವರ ಸಹಾಯಕರನ್ನಾಗಿ ಮಾಡಿದೆವು. وَلَقَدْ ءَاتَيْنَا مُوسَى ٱلْكِتَٰبَ وَجَعَلْنَا مَعَهُۥٓ أَخَاهُ هَٰرُونَ وَزِيرًۭا. ﴿35﴾
36 ನಂತರ ನಾವು ಹೇಳಿದೆವು: “ನಮ್ಮ ವಚನಗಳನ್ನು ನಿಷೇಧಿಸಿದ ಜನರ ಬಳಿಗೆ ಹೋಗಿರಿ.” ನಂತರ ನಾವು ಅವರನ್ನು ಸಂಪೂರ್ಣ ನಾಶ ಮಾಡಿದೆವು. فَقُلْنَا ٱذْهَبَآ إِلَى ٱلْقَوْمِ ٱلَّذِينَ كَذَّبُوا۟ بِـَٔايَٰتِنَا فَدَمَّرْنَٰهُمْ تَدْمِيرًۭا. ﴿36﴾
37 ನೂಹರ ಜನರನ್ನು ಕೂಡ. ಅವರು ಸಂದೇಶವಾಹಕರನ್ನು ನಿಷೇಧಿಸಿದಾಗ ನಾವು ಅವರನ್ನು ಮುಳುಗಿಸಿ ನಾಶ ಮಾಡಿದೆವು ಮತ್ತು ಅವರನ್ನು ಜನರಿಗೆ ದೃಷ್ಟಾಂತವನ್ನಾಗಿ ಮಾಡಿದೆವು. ನಾವು ಅಕ್ರಮಿಗಳಿಗೆ ಯಾತನಾಮಯ ಶಿಕ್ಷೆಯನ್ನು ಸಿದ್ಧಗೊಳಿಸಿದ್ದೇವೆ. وَقَوْمَ نُوحٍۢ لَّمَّا كَذَّبُوا۟ ٱلرُّسُلَ أَغْرَقْنَٰهُمْ وَجَعَلْنَٰهُمْ لِلنَّاسِ ءَايَةًۭ ۖ وَأَعْتَدْنَا لِلظَّٰلِمِينَ عَذَابًا أَلِيمًۭا. ﴿37﴾
38 ಆದ್ ಗೋತ್ರವನ್ನು, ಸಮೂದ್ ಗೋತ್ರವನ್ನು, ಬಾವಿಗಳ ಜನರನ್ನು[1] ಮತ್ತು ಅದರ ಮಧ್ಯೆ ಬದುಕಿದ ಅನೇಕ ತಲೆಮಾರುಗಳನ್ನು ಕೂಡ (ನಾಶ ಮಾಡಿದೆವು).
[1] ಇವರು ಯಾರೆಂಬ ಬಗ್ಗೆ ವ್ಯಾಖ್ಯಾನಕಾರರಿಗೆ ಭಿನ್ನಾಭಿಪ್ರಾಯವಿದೆ. ಕೆಲವರು ಇರುವ ಸೂರ ಬುರೂಜ್‌ನಲ್ಲಿ ವಿವರಿಸಿದ ಹೊಂಡಗಳ ಜನರು ಎಂದು ಹೇಳಿದ್ದಾರೆ.
وَعَادًۭا وَثَمُودَا۟ وَأَصْحَٰبَ ٱلرَّسِّ وَقُرُونًۢا بَيْنَ ذَٰلِكَ كَثِيرًۭا. ﴿38﴾
39 ನಾವು ಅವರೆಲ್ಲರಿಗೂ ಉದಾಹರಣೆಗಳನ್ನು ವಿವರಿಸಿಕೊಟ್ಟಿದ್ದೆವು. ನಂತರ ಅವರೆಲ್ಲರನ್ನೂ ನಾವು ಸರ್ವನಾಶ ಮಾಡಿದೆವು. وَكُلًّۭا ضَرَبْنَا لَهُ ٱلْأَمْثَٰلَ ۖ وَكُلًّۭا تَبَّرْنَا تَتْبِيرًۭا. ﴿39﴾
40 ಕೆಟ್ಟ ಮಳೆಯನ್ನು ಸುರಿಸಲಾದ ಆ ಊರಿನ ಮೂಲಕ ಇವರು (ಮಕ್ಕಾದ ಬಹುದೇವಾರಾಧಕರು) ಹಾದುಹೋಗುತ್ತಿದ್ದಾರೆ.[1] ಆದರೂ ಅವರು ಅದನ್ನು ನೋಡುವುದಿಲ್ಲವೇ? ವಾಸ್ತವವೇನೆಂದರೆ, ಇವರಿಗೆ ಪುನರುತ್ಥಾನದಲ್ಲಿ ಭರವಸೆಯೇ ಇಲ್ಲ.
[1] ಅಂದರೆ ಪ್ರವಾದಿ ಲೂತರ (ಅವರ ಮೇಲೆ ಶಾಂತಿಯಿರಲಿ) ಜನರು ವಾಸವಾಗಿದ್ದ ಸದೂಮ್ ನಗರ.
وَلَقَدْ أَتَوْا۟ عَلَى ٱلْقَرْيَةِ ٱلَّتِىٓ أُمْطِرَتْ مَطَرَ ٱلسَّوْءِ ۚ أَفَلَمْ يَكُونُوا۟ يَرَوْنَهَا ۚ بَلْ كَانُوا۟ لَا يَرْجُونَ نُشُورًۭا. ﴿40﴾
41 ಅವರು ನಿಮ್ಮನ್ನು ಕಾಣುವಾಗ ನಿಮ್ಮನ್ನು ಒಂದು ತಮಾಷೆಯ ವಸ್ತುವನ್ನಾಗಿ ಮಾಡುತ್ತಾ ಕೇಳುತ್ತಾರೆ: “ಅಲ್ಲಾಹು ಸಂದೇಶವಾಹಕನಾಗಿ ಕಳುಹಿಸಿದ್ದು ಇವನನ್ನೋ? وَإِذَا رَأَوْكَ إِن يَتَّخِذُونَكَ إِلَّا هُزُوًا أَهَٰذَا ٱلَّذِى بَعَثَ ٱللَّهُ رَسُولًا. ﴿41﴾
42 ನಾವು ನಮ್ಮ ದೇವರುಗಳ ವಿಷಯದಲ್ಲಿ ಮನಸ್ಸು ಗಟ್ಟಿ ಮಾಡಿ ನಿಲ್ಲದಿರುತ್ತಿದ್ದರೆ ಇವನು ನಮ್ಮನ್ನು ಅವುಗಳಿಂದ ತಪ್ಪಿಸಿಬಿಡುತ್ತಿದ್ದನು.” ಅವರು ಶಿಕ್ಷೆಯನ್ನು ನೋಡುವಾಗ ಯಾರು ಹೆಚ್ಚು ದಾರಿತಪ್ಪಿದವರೆಂದು ಸ್ಪಷ್ಟವಾಗಿ ತಿಳಿದುಕೊಳ್ಳುವರು. إِن كَادَ لَيُضِلُّنَا عَنْ ءَالِهَتِنَا لَوْلَآ أَن صَبَرْنَا عَلَيْهَا ۚ وَسَوْفَ يَعْلَمُونَ حِينَ يَرَوْنَ ٱلْعَذَابَ مَنْ أَضَلُّ سَبِيلًا. ﴿42﴾
43 ತನ್ನ ಸ್ವೇಚ್ಛೆಯನ್ನೇ ದೇವರಾಗಿ ಸ್ವೀಕರಿಸಿದವನನ್ನು[1] ನೀವು ನೋಡಿಲ್ಲವೇ? ನೀವೇನು ಅವನ ಹೊಣೆ ವಹಿಸುತ್ತೀರಾ?
[1] ಅಂದರೆ ತನಗೆ ಸರಿಯೆಂದು ಕಾಣುವುದನ್ನು ದೇವರು ಮತ್ತು ಧರ್ಮವಾಗಿ ಸ್ವೀಕರಿಸಿದವನನ್ನು.
أَرَءَيْتَ مَنِ ٱتَّخَذَ إِلَٰهَهُۥ هَوَىٰهُ أَفَأَنتَ تَكُونُ عَلَيْهِ وَكِيلًا. ﴿43﴾
44 ಅವರಲ್ಲಿ ಹೆಚ್ಚಿನವರು ಕಿವಿಗೊಡುತ್ತಾರೆ ಮತ್ತು ಆಲೋಚಿಸುತ್ತಾರೆಂದು ನೀವು ಭಾವಿಸಿದ್ದೀರಾ? ಅವರು ಕೇವಲ ಜಾನುವಾರುಗಳಂತೆ. ಅಲ್ಲ, ಅವರು ಅವುಗಳಿಗಿಂತಲೂ ಹೆಚ್ಚು ದಾರಿತಪ್ಪಿದ್ದಾರೆ. أَمْ تَحْسَبُ أَنَّ أَكْثَرَهُمْ يَسْمَعُونَ أَوْ يَعْقِلُونَ ۚ إِنْ هُمْ إِلَّا كَٱلْأَنْعَٰمِ ۖ بَلْ هُمْ أَضَلُّ سَبِيلًا. ﴿44﴾
45 ನಿಮ್ಮ ಪರಿಪಾಲಕನು (ಅಲ್ಲಾಹು) ನೆರಳನ್ನು ಹೇಗೆ ವಿಸ್ತರಿಸುತ್ತಿದ್ದಾನೆಂದು ನೀವು ನೋಡಿಲ್ಲವೇ? ಅವನು ಇಚ್ಛಿಸುತ್ತಿದ್ದರೆ ಅದನ್ನು ನಿಶ್ಚಲಗೊಳಿಸುತ್ತಿದ್ದನು. ನಂತರ ನಾವು ಸೂರ್ಯನನ್ನು ಅದಕ್ಕೆ ಮಾರ್ಗದರ್ಶಿಯಾಗಿ ಮಾಡಿದೆವು. أَلَمْ تَرَ إِلَىٰ رَبِّكَ كَيْفَ مَدَّ ٱلظِّلَّ وَلَوْ شَآءَ لَجَعَلَهُۥ سَاكِنًۭا ثُمَّ جَعَلْنَا ٱلشَّمْسَ عَلَيْهِ دَلِيلًۭا. ﴿45﴾
46 ನಂತರ ನಾವು ಅದನ್ನು ಸ್ವಲ್ಪ ಸ್ವಲ್ಪವಾಗಿ ನಮ್ಮ ಕಡೆಗೆ ಎಳೆದೆವು. ثُمَّ قَبَضْنَٰهُ إِلَيْنَا قَبْضًۭا يَسِيرًۭا. ﴿46﴾
47 ಅವನೇ ನಿಮಗೆ ರಾತ್ರಿಯನ್ನು ಉಡುಪನ್ನಾಗಿ ಮತ್ತು ನಿದ್ದೆಯನ್ನು ವಿಶ್ರಾಂತಿಯನ್ನಾಗಿ ಮಾಡಿಕೊಟ್ಟವನು. ಅವನು ಹಗಲನ್ನು ಎಚ್ಚರವಾಗಿರುವ ಸಮಯವಾಗಿ ಮಾಡಿದನು. وَهُوَ ٱلَّذِى جَعَلَ لَكُمُ ٱلَّيْلَ لِبَاسًۭا وَٱلنَّوْمَ سُبَاتًۭا وَجَعَلَ ٱلنَّهَارَ نُشُورًۭا. ﴿47﴾
48 ತನ್ನ ದಯೆಗೆ (ಮಳೆಗೆ) ಮೊದಲು ಸುವಾರ್ತೆಯಾಗಿ ಗಾಳಿಗಳನ್ನು ಕಳುಹಿಸುವವನು ಅವನೇ. ನಾವು ಆಕಾಶದಿಂದ ಶುದ್ಧ ನೀರನ್ನು ಇಳಿಸುತ್ತೇವೆ. وَهُوَ ٱلَّذِىٓ أَرْسَلَ ٱلرِّيَٰحَ بُشْرًۢا بَيْنَ يَدَىْ رَحْمَتِهِۦ ۚ وَأَنزَلْنَا مِنَ ٱلسَّمَآءِ مَآءًۭ طَهُورًۭا. ﴿48﴾
49 ನಿರ್ಜೀವ ಸ್ಥಿತಿಯಲ್ಲಿರುವ ಊರಿಗೆ ಅದರ ಮೂಲಕ ಜೀವ ನೀಡಲು. ನಾವು ಅದನ್ನು ನಮ್ಮ ಸೃಷ್ಟಿಗಳಲ್ಲಿ ಸೇರಿದ ಅಸಂಖ್ಯ ಜಾನುವಾರುಗಳು ಮತ್ತು ಮನುಷ್ಯರಿಗೆ ಕುಡಿಸುತ್ತೇವೆ. لِّنُحْۦِىَ بِهِۦ بَلْدَةًۭ مَّيْتًۭا وَنُسْقِيَهُۥ مِمَّا خَلَقْنَآ أَنْعَٰمًۭا وَأَنَاسِىَّ كَثِيرًۭا. ﴿49﴾
50 ಅವರು ಉಪದೇಶ ಪಡೆಯಲೆಂದು ನಾವು ಅದನ್ನು (ಮಳೆನೀರನ್ನು) ಅವರ ಮಧ್ಯೆ ವಿತರಣೆ ಮಾಡುತ್ತೇವೆ. ಆದರೆ ಜನರಲ್ಲಿ ಹೆಚ್ಚಿನವರು ನಿಷೇಧಿಸಲು ಮಾತ್ರ ಮುಂದಾಗುತ್ತಾರೆ. وَلَقَدْ صَرَّفْنَٰهُ بَيْنَهُمْ لِيَذَّكَّرُوا۟ فَأَبَىٰٓ أَكْثَرُ ٱلنَّاسِ إِلَّا كُفُورًۭا. ﴿50﴾
51 ನಾವು ಇಚ್ಛಿಸುತ್ತಿದ್ದರೆ ಎಲ್ಲ ಊರುಗಳಿಗೂ ಒಬ್ಬೊಬ್ಬ ಮುನ್ನೆಚ್ಚರಿಕೆಗಾರನನ್ನು ಕಳುಹಿಸುತ್ತಿದ್ದೆವು. وَلَوْ شِئْنَا لَبَعَثْنَا فِى كُلِّ قَرْيَةٍۢ نَّذِيرًۭا. ﴿51﴾
52 ಆದ್ದರಿಂದ ನೀವು ಸತ್ಯನಿಷೇಧಿಗಳನ್ನು ಅನುಸರಿಸಬೇಡಿ. ಇದರ (ಕುರ್‌ಆನ್‍ನ) ಮೂಲಕ ಅವರ ವಿರುದ್ಧ ಮಹಾ ಹೋರಾಟ ಮಾಡಿರಿ. فَلَا تُطِعِ ٱلْكَٰفِرِينَ وَجَٰهِدْهُم بِهِۦ جِهَادًۭا كَبِيرًۭا. ﴿52﴾
53 ಅವನೇ ಎರಡು ಸಮುದ್ರಗಳನ್ನು ಬೆರೆಯಲು ಬಿಟ್ಟವನು. ಒಂದರಲ್ಲಿ ತಾಜಾ ಸಿಹಿನೀರು ಮತ್ತು ಇನ್ನೊಂದರಲ್ಲಿ ಕಹಿ ಉಪ್ಪು ನೀರು. ಅವನು ಅವೆರಡರ ಮಧ್ಯೆ ಒಂದು ಪರದೆಯನ್ನು ಮತ್ತು ಬಲಿಷ್ಠ ತಡೆಯನ್ನು ನಿರ್ಮಸಿದ್ದಾನೆ. ۞ وَهُوَ ٱلَّذِى مَرَجَ ٱلْبَحْرَيْنِ هَٰذَا عَذْبٌۭ فُرَاتٌۭ وَهَٰذَا مِلْحٌ أُجَاجٌۭ وَجَعَلَ بَيْنَهُمَا بَرْزَخًۭا وَحِجْرًۭا مَّحْجُورًۭا. ﴿53﴾
54 ಅವನೇ ಮನುಷ್ಯನನ್ನು ನೀರಿನಿಂದ ಸೃಷ್ಟಿಸಿದವನು. ನಂತರ ಅವನಿಗೆ ವಂಶಾವಳಿಯನ್ನು ಮತ್ತು ವೈವಾಹಿಕ ಸಂಬಂಧಿಗಳನ್ನು ಮಾಡಿಕೊಟ್ಟನು. ನಿಮ್ಮ ಪರಿಪಾಲಕನು (ಅಲ್ಲಾಹು) ಸರ್ವಶಕ್ತನಾಗಿದ್ದಾನೆ. وَهُوَ ٱلَّذِى خَلَقَ مِنَ ٱلْمَآءِ بَشَرًۭا فَجَعَلَهُۥ نَسَبًۭا وَصِهْرًۭا ۗ وَكَانَ رَبُّكَ قَدِيرًۭا. ﴿54﴾
55 ಅವರು ಅಲ್ಲಾಹನನ್ನು ಬಿಟ್ಟು ಅವರಿಗೆ ಉಪಕಾರ ಅಥವಾ ತೊಂದರೆ ಮಾಡದವರನ್ನು ಆರಾಧಿಸುತ್ತಿದ್ದಾರೆ. ಸತ್ಯನಿಷೇಧಿಯು ತನ್ನ ಪರಿಪಾಲಕನ ವಿರುದ್ಧ (ಶೈತಾನನಿಗೆ) ಬೆಂಬಲಿಗನಾಗಿದ್ದಾನೆ. وَيَعْبُدُونَ مِن دُونِ ٱللَّهِ مَا لَا يَنفَعُهُمْ وَلَا يَضُرُّهُمْ ۗ وَكَانَ ٱلْكَافِرُ عَلَىٰ رَبِّهِۦ ظَهِيرًۭا. ﴿55﴾
56 (ಪ್ರವಾದಿಯವರೇ) ನಾವು ನಿಮ್ಮನ್ನು ಸುವಾರ್ತೆ ತಿಳಿಸುವವರಾಗಿ ಮತ್ತು ಮುನ್ನೆಚ್ಚರಿಕೆ ನೀಡುವವರಾಗಿಯೇ ಕಳುಹಿಸಿದ್ದೇವೆ. وَمَآ أَرْسَلْنَٰكَ إِلَّا مُبَشِّرًۭا وَنَذِيرًۭا. ﴿56﴾
57 ಹೇಳಿರಿ: “ನಾನು ಇದಕ್ಕಾಗಿ ನಿಮ್ಮಿಂದ ಯಾವುದೇ ಪ್ರತಿಫಲವನ್ನು ಕೇಳುವುದಿಲ್ಲ. ಆದರೆ ಯಾರು ತನ್ನ ಪರಿಪಾಲಕನ (ಅಲ್ಲಾಹನ) ಕಡೆಗೆ ಮಾರ್ಗವನ್ನು ಸ್ವೀಕರಿಸಲು ಇಚ್ಛಿಸುತ್ತಾನೋ (ಅವನು ಅದನ್ನು ಸ್ವೀಕರಿಸಬೇಕು ಎಂಬುದರ) ಹೊರತು.” قُلْ مَآ أَسْـَٔلُكُمْ عَلَيْهِ مِنْ أَجْرٍ إِلَّا مَن شَآءَ أَن يَتَّخِذَ إِلَىٰ رَبِّهِۦ سَبِيلًۭا. ﴿57﴾
58 ಎಂದಿಗೂ ಸಾಯದೆ ನಿರಂತರ ಬದುಕಿರುವವನಲ್ಲಿ (ಅಲ್ಲಾಹನಲ್ಲಿ) ಭರವಸೆಯಿಡಿ. ಅವನ ಸ್ತುತಿಯೊಂದಿಗೆ ಅವನ ಪರಿಶುದ್ಧಿಯನ್ನು ಕೊಂಡಾಡಿರಿ. ಅವನ ದಾಸರು ಮಾಡುವ ಪಾಪಗಳನ್ನು ಸೂಕ್ಷ್ಮವಾಗಿ ತಿಳಿಯಲು ಅವನೇ ಸಾಕು. وَتَوَكَّلْ عَلَى ٱلْحَىِّ ٱلَّذِى لَا يَمُوتُ وَسَبِّحْ بِحَمْدِهِۦ ۚ وَكَفَىٰ بِهِۦ بِذُنُوبِ عِبَادِهِۦ خَبِيرًا. ﴿58﴾
59 ಅವನು ಭೂಮ್ಯಾಕಾಶಗಳನ್ನು ಮತ್ತು ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳನ್ನು ಆರು ದಿನಗಳಲ್ಲಿ ಸೃಷ್ಟಿಸಿದವನು. ನಂತರ ಅವನು ಸಿಂಹಾಸನದಲ್ಲಿ ಆರೂಢನಾದನು. ಅವನು ಪರಮ ದಯಾಳು. ನೀವು ಅವನ ಬಗ್ಗೆ ಸೂಕ್ಷ್ಮವಾಗಿ ತಿಳಿದವನೊಡನೆ (ಪ್ರವಾದಿಯೊಡನೆ) ಕೇಳಿರಿ. ٱلَّذِى خَلَقَ ٱلسَّمَٰوَٰتِ وَٱلْأَرْضَ وَمَا بَيْنَهُمَا فِى سِتَّةِ أَيَّامٍۢ ثُمَّ ٱسْتَوَىٰ عَلَى ٱلْعَرْشِ ۚ ٱلرَّحْمَٰنُ فَسْـَٔلْ بِهِۦ خَبِيرًۭا. ﴿59﴾
60 “ಪರಮ ದಯಾಳುವಿಗೆ (ಅಲ್ಲಾಹನಿಗೆ) ಸಾಷ್ಟಾಂಗ ಮಾಡಿರಿ” ಎಂದು ಅವರೊಡನೆ ಹೇಳಲಾದರೆ ಅವರು ಕೇಳುತ್ತಾರೆ: “ಪರಮ ದಯಾಳು ಎಂದರೇನು?[1] ನೀನು ಆಜ್ಞಾಪಿಸುವವನಿಗೆ ನಾವು ಸಾಷ್ಟಾಂಗ ಮಾಡಬೇಕೇ?” ಇದು ಅವರಿಗೆ ದ್ವೇಷವನ್ನು ಇನ್ನಷ್ಟು ಹೆಚ್ಚಿಸಿಬಿಟ್ಟಿತು.
[1] ಮಕ್ಕಾದ ಸತ್ಯನಿಷೇಧಿಗಳು ಅಲ್ಲಾಹನನ್ನು ರಹ್ಮಾನ್ (ಪರಮ ದಯಾಳು) ಎಂದು ಒಪ್ಪಿಕೊಳ್ಳುತ್ತಿರಲಿಲ್ಲ.
وَإِذَا قِيلَ لَهُمُ ٱسْجُدُوا۟ لِلرَّحْمَٰنِ قَالُوا۟ وَمَا ٱلرَّحْمَٰنُ أَنَسْجُدُ لِمَا تَأْمُرُنَا وَزَادَهُمْ نُفُورًۭا ۩. ﴿60﴾
61 ಆಕಾಶದಲ್ಲಿ ನಕ್ಷತ್ರಪುಂಜಗಳನ್ನು ಸ್ಥಾಪಿಸಿದವನು (ಅಲ್ಲಾಹು) ಸಮೃದ್ಧಪೂರ್ಣನು. ಅವನು ಅದರಲ್ಲಿ ಒಂದು ದೀಪವನ್ನು (ಸೂರ್ಯನನ್ನು) ಮತ್ತು ಬೆಳಗುವ ಚಂದ್ರನನ್ನು ಉಂಟುಮಾಡಿದನು. تَبَارَكَ ٱلَّذِى جَعَلَ فِى ٱلسَّمَآءِ بُرُوجًۭا وَجَعَلَ فِيهَا سِرَٰجًۭا وَقَمَرًۭا مُّنِيرًۭا. ﴿61﴾
62 ಅವನೇ ರಾತ್ರಿ-ಹಗಲುಗಳನ್ನು ಒಂದರ ಹಿಂದೆ ಇನ್ನೊಂದು ಬರುವಂತೆ ಮಾಡಿದವನು. ಉಪದೇಶ ಸ್ವೀಕರಿಸಲು ಬಯಸುವವರಿಗೆ ಅಥವಾ ಕೃತಜ್ಞರಾಗಲು ಬಯಸುವವರಿಗೆ (ಒಂದು ದೃಷ್ಟಾಂತವೆಂಬಂತೆ). وَهُوَ ٱلَّذِى جَعَلَ ٱلَّيْلَ وَٱلنَّهَارَ خِلْفَةًۭ لِّمَنْ أَرَادَ أَن يَذَّكَّرَ أَوْ أَرَادَ شُكُورًۭا. ﴿62﴾
63 ಪರಮ ದಯಾಳುವಿನ (ಅಲ್ಲಾಹನ) ದಾಸರು ಭೂಮಿಯಲ್ಲಿ ವಿನಯದಿಂದ ನಡೆಯುವವರಾಗಿದ್ದಾರೆ. ಅವಿವೇಕಿಗಳು ಅವರೊಡನೆ ಮಾತನಾಡಿದರೆ ಅವರು ಶಾಂತಿ-ಸಮಾಧಾನದ ಮಾತುಗಳನ್ನು ಹೇಳುತ್ತಾರೆ.[1]
[1] ಅಂದರೆ ಅವರು ಅವಿವೇಕಿಗಳೊಡನೆ ತರ್ಕ ಅಥವಾ ವಾಗ್ವಾದಕ್ಕೆ ಇಳಿಯುವುದಿಲ್ಲ. ಬದಲಿಗೆ, ಸಭ್ಯವಾದ ರೀತಿಯಲ್ಲಿ ಅವರನ್ನು ನಿರ್ಲಕ್ಷಿಸುತ್ತಾ ಸಾಗಿ ಬಿಡುತ್ತಾರೆ.
وَعِبَادُ ٱلرَّحْمَٰنِ ٱلَّذِينَ يَمْشُونَ عَلَى ٱلْأَرْضِ هَوْنًۭا وَإِذَا خَاطَبَهُمُ ٱلْجَٰهِلُونَ قَالُوا۟ سَلَٰمًۭا. ﴿63﴾
64 ಅವರು (ಅಲ್ಲಾಹನ ದಾಸರು) ಯಾರೆಂದರೆ, ತಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ಸಾಷ್ಟಾಂಗ ಮಾಡುತ್ತಾ ಮತ್ತು ನಿಂತು ನಮಾಝ್ ಮಾಡುತ್ತಾ ರಾತ್ರಿಯನ್ನು ಕಳೆಯುವವರು. وَٱلَّذِينَ يَبِيتُونَ لِرَبِّهِمْ سُجَّدًۭا وَقِيَٰمًۭا. ﴿64﴾
65 ಅವರು ಹೇಳುತ್ತಾರೆ: “ನಮ್ಮ ಪರಿಪಾಲಕನೇ! ನಮ್ಮಿಂದ ನರಕ ಶಿಕ್ಷೆಯನ್ನು ದೂರೀಕರಿಸು. ನಿಜಕ್ಕೂ ಅದರ ಶಿಕ್ಷೆಯು ಸದಾ ಅಂಟಿಕೊಂಡಿರುತ್ತದೆ. وَٱلَّذِينَ يَقُولُونَ رَبَّنَا ٱصْرِفْ عَنَّا عَذَابَ جَهَنَّمَ ۖ إِنَّ عَذَابَهَا كَانَ غَرَامًا. ﴿65﴾
66 ನಿಶ್ಚಯವಾಗಿಯೂ ಅದು ಬಹಳ ನಿಕೃಷ್ಟ ವಾಸಸ್ಥಳ ಮತ್ತು ವಾಸ್ತವ್ಯವಾಗಿದೆ.” إِنَّهَا سَآءَتْ مُسْتَقَرًّۭا وَمُقَامًۭا. ﴿66﴾
67 ಅವರು ಖರ್ಚು ಮಾಡುವಾಗ ಅತಿಯಾಗಿ ಖರ್ಚು ಮಾಡುವುದಿಲ್ಲ ಮತ್ತು ಜಿಪುಣತನ ತೋರುವುದೂ ಇಲ್ಲ. ಬದಲಿಗೆ, ಅವೆರಡರ ನಡುವಿನ ಮಧ್ಯಮ ಮಾರ್ಗವನ್ನು ಸ್ವೀಕರಿಸುತ್ತಾರೆ. وَٱلَّذِينَ إِذَآ أَنفَقُوا۟ لَمْ يُسْرِفُوا۟ وَلَمْ يَقْتُرُوا۟ وَكَانَ بَيْنَ ذَٰلِكَ قَوَامًۭا. ﴿67﴾
68 ಅವರು ಅಲ್ಲಾಹನ ಜೊತೆಗೆ ಬೇರೆ ದೇವರುಗಳನ್ನು ಕರೆದು ಪ್ರಾರ್ಥಿಸುವುದಿಲ್ಲ, ಕಾನೂನುಬದ್ಧ ರೀತಿಯಲ್ಲೇ ಹೊರತು ಅಲ್ಲಾಹು (ಕೊಲ್ಲುವುದನ್ನು) ನಿಷೇಧಿಸಿದ ಜೀವವನ್ನು ಕೊಲ್ಲುವುದಿಲ್ಲ ಮತ್ತು ವ್ಯಭಿಚಾರ ಮಾಡುವುದಿಲ್ಲ. ಯಾರು ಇವುಗಳನ್ನು ಮಾಡುತ್ತಾನೋ ಅವನು ಶಿಕ್ಷೆಯನ್ನು ಪಡೆಯುವನು. وَٱلَّذِينَ لَا يَدْعُونَ مَعَ ٱللَّهِ إِلَٰهًا ءَاخَرَ وَلَا يَقْتُلُونَ ٱلنَّفْسَ ٱلَّتِى حَرَّمَ ٱللَّهُ إِلَّا بِٱلْحَقِّ وَلَا يَزْنُونَ ۚ وَمَن يَفْعَلْ ذَٰلِكَ يَلْقَ أَثَامًۭا. ﴿68﴾
69 ಪುನರುತ್ಥಾನ ದಿನದಂದು ಅವನಿಗೆ ಇಮ್ಮಡಿ ಶಿಕ್ಷೆ ನೀಡಲಾಗುವುದು. ಅವನು ಅವಮಾನವನ್ನು ಸಹಿಸುತ್ತಾ ಸದಾಕಾಲ ಅದರಲ್ಲಿ ವಾಸಿಸುವನು. يُضَٰعَفْ لَهُ ٱلْعَذَابُ يَوْمَ ٱلْقِيَٰمَةِ وَيَخْلُدْ فِيهِۦ مُهَانًا. ﴿69﴾
70 ಆದರೆ ಪಶ್ಚಾತ್ತಾಪಪಟ್ಟವರು, ಸತ್ಯವಿಶ್ವಾಸಿಗಳಾದವರು ಮತ್ತು ಸತ್ಕರ್ಮವೆಸಗಿದವರು ಇದಕ್ಕೆ ಹೊರತಾಗಿದ್ದಾರೆ. ಅಲ್ಲಾಹು ಅವರ ದುಷ್ಕೃತ್ಯಗಳನ್ನು ಸತ್ಕರ್ಮಗಳಾಗಿ ಬದಲಾಯಿಸುವನು. ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ. إِلَّا مَن تَابَ وَءَامَنَ وَعَمِلَ عَمَلًۭا صَٰلِحًۭا فَأُو۟لَٰٓئِكَ يُبَدِّلُ ٱللَّهُ سَيِّـَٔاتِهِمْ حَسَنَٰتٍۢ ۗ وَكَانَ ٱللَّهُ غَفُورًۭا رَّحِيمًۭا. ﴿70﴾
71 ಯಾರು ಪಶ್ಚಾತ್ತಾಪಪಟ್ಟು ಸತ್ಕರ್ಮವೆಸಗುತ್ತಾನೋ ಅವನು ಅಲ್ಲಾಹನ ಕಡೆಗೆ ಪ್ರಾಮಾಣಿಕವಾಗಿ ಮರಳಿದ್ದಾನೆ. وَمَن تَابَ وَعَمِلَ صَٰلِحًۭا فَإِنَّهُۥ يَتُوبُ إِلَى ٱللَّهِ مَتَابًۭا. ﴿71﴾
72 ಅವರು ಸುಳ್ಳು ಸಾಕ್ಷ್ಯ ಹೇಳದವರು ಮತ್ತು ಅನಗತ್ಯ ಸಂಗತಿಗಳ ಬಳಿಯಿಂದ ನಡೆಯಬೇಕಾಗಿ ಬಂದರೆ ಸಭ್ಯತೆಯಿಂದ ನಡೆಯುವವರಾಗಿದ್ದಾರೆ. وَٱلَّذِينَ لَا يَشْهَدُونَ ٱلزُّورَ وَإِذَا مَرُّوا۟ بِٱللَّغْوِ مَرُّوا۟ كِرَامًۭا. ﴿72﴾
73 ಅವರಿಗೆ ಅವರ ಪರಿಪಾಲಕನ (ಅಲ್ಲಾಹನ) ವಚನಗಳ ಮೂಲಕ ಉಪದೇಶ ನೀಡಲಾದರೆ ಅವರು ಕಿವುಡರು ಮತ್ತು ಕುರುಡರಾಗಿ ಬಿಡುವುದಿಲ್ಲ. وَٱلَّذِينَ إِذَا ذُكِّرُوا۟ بِـَٔايَٰتِ رَبِّهِمْ لَمْ يَخِرُّوا۟ عَلَيْهَا صُمًّۭا وَعُمْيَانًۭا. ﴿73﴾
74 ಅವರು ಪ್ರಾರ್ಥಿಸುತ್ತಾರೆ: “ನಮ್ಮ ಪರಿಪಾಲಕನೇ! ನಮ್ಮ ಪತ್ನಿಯರಲ್ಲಿ ಮತ್ತು ನಮ್ಮ ಮಕ್ಕಳಲ್ಲಿ ನಮಗೆ ಕಣ್ತಂಪನ್ನು ನೀಡು. ದೇವಭಯವುಳ್ಳವರಿಗೆ ನಮ್ಮನ್ನು ಮುಂದಾಳುಗಳನ್ನಾಗಿ ಮಾಡು.” وَٱلَّذِينَ يَقُولُونَ رَبَّنَا هَبْ لَنَا مِنْ أَزْوَٰجِنَا وَذُرِّيَّٰتِنَا قُرَّةَ أَعْيُنٍۢ وَٱجْعَلْنَا لِلْمُتَّقِينَ إِمَامًا. ﴿74﴾
75 ಅವರು ತಾಳ್ಮೆ ತೋರಿದ್ದಕ್ಕೆ ಪ್ರತಿಫಲವಾಗಿ ಅವರಿಗೆ ಸ್ವರ್ಗದ ಉನ್ನತ ಮಹಲುಗಳನ್ನು ನೀಡಲಾಗುವುದು. ಅಲ್ಲಿ ಅವರು ಅಭಿವಂದನೆಗಳನ್ನು ಮತ್ತು ಶಾಂತಿಯ ಹಾರೈಕೆಗಳನ್ನು ಪಡೆಯುವರು. أُو۟لَٰٓئِكَ يُجْزَوْنَ ٱلْغُرْفَةَ بِمَا صَبَرُوا۟ وَيُلَقَّوْنَ فِيهَا تَحِيَّةًۭ وَسَلَٰمًا. ﴿75﴾
76 ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಆ ವಾಸಸ್ಥಳ ಮತ್ತು ಸ್ಥಾನಮಾನವು ಬಹಳ ಉತ್ತಮವಾಗಿದೆ. خَٰلِدِينَ فِيهَا ۚ حَسُنَتْ مُسْتَقَرًّۭا وَمُقَامًۭا. ﴿76﴾
77 ಹೇಳಿರಿ: “ನಿಮ್ಮ ಪ್ರಾರ್ಥನೆಗಳು ಇಲ್ಲದಿರುತ್ತಿದ್ದರೆ ನನ್ನ ಪರಿಪಾಲಕನು (ಅಲ್ಲಾಹು) ನಿಮ್ಮನ್ನು ಪರಿಗಣಿಸುತ್ತಲೇ ಇರಲಿಲ್ಲ.” ಆದರೆ ನೀವು ನಿಷೇಧಿಸಿದ್ದೀರಿ. ಆದ್ದರಿಂದ ಅದಕ್ಕಿರುವ ಶಿಕ್ಷೆಯು ಸದ್ಯವೇ ನಿಮ್ಮನ್ನು ಅಂಟಿಕೊಳ್ಳಲಿದೆ. قُلْ مَا يَعْبَؤُا۟ بِكُمْ رَبِّى لَوْلَا دُعَآؤُكُمْ ۖ فَقَدْ كَذَّبْتُمْ فَسَوْفَ يَكُونُ لِزَامًۢا. ﴿77﴾