ಸತ್ಯವಾಗಿ ಸಂಭವಿಸುವಂತದ್ದು.
അൽ ഹാഖ്ഖ الحاقة Al-Haqqah
സൂറത്ത് അൽ ഹാഖ്ഖ (Al-Haqqah), ഖുർആൻ അധ്യായം 69 — അറബി ആയത്തുകളും ಕನ್ನಡ വിവർത്തനവും ഉൾപ്പെടെ 52 ആയത്തുകൾ വായിക്കുക. Read Surah Al-Haqqah with Arabic text and ಕನ್ನಡ translation.
ಸತ್ಯವಾಗಿ ಸಂಭವಿಸುವಂತದ್ದು ಏನು?
ಸತ್ಯವಾಗಿ ಸಂಭವಿಸುವಂತದ್ದು ಏನೆಂದು ನಿಮಗೇನು ಗೊತ್ತು?
ಸಮೂದ್ ಮತ್ತು ಆದ್ ಗೋತ್ರದವರು ಆ ಭಯಾನಕ ಘಟನೆಯನ್ನು (ಪುನರುತ್ಥಾನವನ್ನು) ನಿಷೇಧಿಸಿದರು.
ಸಮೂದ್ ಗೋತ್ರದವರನ್ನು ಮಿತಿಮೀರಿದ (ಭಯಾನಕ ಸದ್ದಿನ) ಮೂಲಕ ನಾಶ ಮಾಡಲಾಯಿತು.
ಆದ್ ಗೋತ್ರದವರನ್ನು ಅತಿಶೀತ ಉಗ್ರ ಗಾಳಿಯ ಮೂಲಕ ನಾಶ ಮಾಡಲಾಯಿತು.
ಅಲ್ಲಾಹು ಅದನ್ನು ಅವರ ಮೇಲೆ ಏಳು ರಾತ್ರಿಗಳು ಮತ್ತು ಎಂಟು ದಿನಗಳ ಕಾಲ ನಿರಂತರವಾಗಿ ಹೇರಿದನು; ನಂತರ ಆ ಜನರು—ಕುಸಿದು ಬಿದ್ದ ಖರ್ಜೂರ ಮರಗಳ ಕಾಂಡಗಳೋ ಎಂಬಂತೆ—ಬೋರಲು ಬಿದ್ದು ಸತ್ತಿರುವುದು ನಿಮಗೆ ಕಾಣಬಹುದು.
ಅವರಲ್ಲಿ ಯಾರಾದರೂ ಬಾಕಿಯುಳಿದದ್ದನ್ನು ನೀವು ಕಂಡಿದ್ದೀರಾ?
ಫರೋಹ, ಅವನಿಗಿಂತ ಮೊದಲಿನವರು ಮತ್ತು ಬುಡಮೇಲುಗೊಳಿಸಲಾದ ಊರಿನವರು ಪಾಪಗಳೊಂದಿಗೆ ಬಂದರು.
ಅವರು ಅವರ ಪರಿಪಾಲಕನ (ಅಲ್ಲಾಹನ) ಸಂದೇಶವಾಹಕರಿಗೆ ಅವಿಧೇಯತೆ ತೋರಿದರು. ಆಗ ಅಲ್ಲಾಹು ಅವರನ್ನು ಕಠೋರವಾದ ಹಿಡಿತದಿಂದ ಹಿಡಿದನು.
ನಿಶ್ಚಯವಾಗಿಯೂ ನೀರು ಎಲ್ಲೆ ಮೀರಿ ಹರಿದಾಗ ನಾವು ನಿಮ್ಮನ್ನು ನಾವೆಯಲ್ಲಿ ಹೊತ್ತೊಯ್ದೆವು.
ನಾವು ಅದನ್ನು ನಿಮಗೆ ಒಂದು ನೆನಪಾಗಿ ಮಾಡಲು ಮತ್ತು ಜಾಗೃತ ಕಿವಿಯು ಅದರ ಬಗ್ಗೆ ಜಾಗೃತವಾಗಿರಲು.
ಕಹಳೆಯಲ್ಲಿ ಒಂದು ಊದುವಿಕೆಯನ್ನು ಊದಲಾದಾಗ.
ಭೂಮಿ ಮತ್ತು ಪರ್ವತಗಳನ್ನು ಎತ್ತಲಾಗುವುದು ಮತ್ತು ಅವೆರಡನ್ನು ಒಂದೇ ಹೊಡೆತಕ್ಕೆ ಪುಡಿಪುಡಿ ಮಾಡಲಾಗುವುದು.
ಅಂದು ಆ ಸಂಭವಿಸುವಿಕೆಯು (ಪುನರುತ್ಥಾನವು) ಸಂಭವಿಸುವುದು.
ಆಕಾಶವು ಇಬ್ಭಾಗವಾಗುವುದು ಮತ್ತು ಅಂದು ಅದು ಬಲಹೀನವಾಗಿರುವುದು.
ದೇವದೂತರುಗಳು ಅದರ ತುದಿಗಳಲ್ಲಿರುವರು. ಅಂದು ಅವರ ಮೇಲ್ಭಾಗದಲ್ಲಿ ಎಂಟು (ದೇವದೂತರು) ನಿಮ್ಮ ಪರಿಪಾಲಕನ (ಅಲ್ಲಾಹನ) ಸಿಂಹಾಸನವನ್ನು ಎತ್ತಿಕೊಂಡಿರುವರು.
ಅಂದು ನಿಮ್ಮೆಲ್ಲರನ್ನೂ ಪ್ರದರ್ಶಿಸಲಾಗುವುದು. ನಿಮ್ಮ ಯಾವುದೇ ರಹಸ್ಯಗಳು ರಹಸ್ಯವಾಗಿರುವುದಿಲ್ಲ.
ಆದ್ದರಿಂದ ಯಾರಿಗೆ ಅವನ ಕರ್ಮಪುಸ್ತಕವನ್ನು ಬಲಗೈಯಲ್ಲಿ ನೀಡಲಾಗುತ್ತದೋ ಅವನು ಹೇಳುವನು: “ಇಗೋ! ನನ್ನ ಕರ್ಮಪುಸ್ತಕವನ್ನು ಓದಿರಿ!
ನಿಶ್ಚಯವಾಗಿಯೂ, ನಾನು ನನ್ನ ವಿಚಾರಣೆಯನ್ನು ಎದುರಿಸಬೇಕಾಗಿದೆಯೆಂದು ನನಗೆ ಪೂರ್ಣ ನಂಬಿಕೆಯಿತ್ತು.”
ಆದ್ದರಿಂದ ಅವನು ಸಂತೃಪ್ತ ಜೀವನದಲ್ಲಿರುವನು.
ಉನ್ನತ ಸ್ವರ್ಗದಲ್ಲಿ.
ಅದರ ಹಣ್ಣುಗಳು ಬಾಗಿಕೊಂಡಿರುವುವು.
(ಅವರೊಡನೆ ಹೇಳಲಾಗುವುದು): “ಕಳೆದುಹೋದ ದಿನಗಳಲ್ಲಿ ನೀವು ಮುಂದಕ್ಕೆ ಕಳುಹಿಸಿದ ಸತ್ಕರ್ಮಗಳ ಕಾರಣದಿಂದ ಸಂತೋಷವಾಗಿ ತಿನ್ನಿರಿ ಮತ್ತು ಕುಡಿಯಿರಿ.”
ಆದರೆ ಯಾರಿಗೆ ಅವನ ಕರ್ಮಪುಸ್ತಕವನ್ನು ಎಡಗೈಯಲ್ಲಿ ನೀಡಲಾಗುತ್ತದೋ ಅವನು ಹೇಳುವನು: “ನನಗೆ ನನ್ನ ಕರ್ಮಪುಸ್ತಕವನ್ನು ನೀಡದಿರುತ್ತಿದ್ದರೆ ಎಷ್ಟು ಚೆನ್ನಾಗಿತ್ತು!
ನನ್ನ ವಿಚಾರಣೆ ಏನೆಂದು ನನಗೆ ತಿಳಿಯದಿರುತ್ತಿದ್ದರೆ (ಎಷ್ಟು ಚೆನ್ನಾಗಿತ್ತು)!
ಮರಣದೊಂದಿಗೆ ಎಲ್ಲವೂ ಕೊನೆಗೊಳ್ಳುತ್ತಿದ್ದರೆ ಎಷ್ಟು ಚೆನ್ನಾಗಿತ್ತು!
ನನಗೆ ನನ್ನ ಆಸ್ತಿ ಪ್ರಯೋಜನ ನೀಡಲಿಲ್ಲ.
ನನ್ನ ಅಧಿಕಾರವು ನನ್ನಿಂದ ಹೊರಟುಹೋಗಿದೆ.”
(ಆಗ ಹೀಗೆ ಆಜ್ಞಾಪಿಸಲಾಗುವುದು): “ಅವನನ್ನು ಹಿಡಿಯಿರಿ; ಮತ್ತು ಅವನಿಗೆ ಸಂಕೋಲೆಯನ್ನು ತೊಡಿಸಿರಿ.
ನಂತರ ಅವನನ್ನು ನರಕದಲ್ಲಿ ಹಾಕಿರಿ.
ನಂತರ ಎಪ್ಪತ್ತು ಮೊಳ ಅಳತೆಯಿರುವ ಸಂಕೋಲೆಯಲ್ಲಿ ಅವನನ್ನು ನುಸುಳಿಸಿರಿ.
ನಿಶ್ಚಯವಾಗಿಯೂ, ಅವನು ಪರಮೋಚ್ಛನಾದ ಅಲ್ಲಾಹನಲ್ಲಿ ವಿಶ್ವಾಸವಿಡುತ್ತಿರಲಿಲ್ಲ.
ಅವನು ಬಡವರಿಗೆ ಅನ್ನ ನೀಡಲು ಪ್ರೇರೇಪಿಸುತ್ತಿರಲಿಲ್ಲ.
ಆದ್ದರಿಂದ ಇಂದು ಅವನಿಗೆ ಇಲ್ಲಿ ಯಾವುದೇ ಆತ್ಮೀಯ ಗೆಳೆಯನಿಲ್ಲ.
ಕೀವಿನಿಂದಲೇ ಹೊರತು ಅವನಿಗೆ ಬೇರೆ ಆಹಾರವಿಲ್ಲ.
ಅದನ್ನು ಪಾಪಿಗಳ ಹೊರತಾಗಿ ಯಾರೂ ಸೇವಿಸುವುದಿಲ್ಲ.
ಆದ್ದರಿಂದ ನೀವು ನೋಡುತ್ತಿರುವುದರ ಮೇಲೆ ನಾನು ಆಣೆ ಮಾಡುತ್ತೇನೆ.
ನೀವು ನೋಡದಿರುವವುಗಳ ಮೇಲೂ (ಆಣೆ ಮಾಡುತ್ತೇನೆ).
ನಿಶ್ಚಯವಾಗಿಯೂ ಇದು (ಕುರ್ಆನ್) ಒಬ್ಬ ಗಣ್ಯ ಸಂದೇಶವಾಹಕನ ವಚನವಾಗಿದೆ.
ಇದು ಯಾವುದೇ ಕವಿಯ ಮಾತುಗಳಲ್ಲ. ನೀವು ಸ್ವಲ್ಪವೇ ವಿಶ್ವಾಸವಿಡುತ್ತೀರಿ.
ಇದು ಜ್ಯೋತಿಷಿಯ ಮಾತುಗಳೂ ಅಲ್ಲ. ನೀವು ಸ್ವಲ್ಪವೇ ಉಪದೇಶ ಪಡೆಯುತ್ತೀರಿ.
ಇದು ಸರ್ವಲೋಕಗಳ ಪರಿಪಾಲಕನಿಂದ (ಅಲ್ಲಾಹನಿಂದ) ಅವತೀರ್ಣವಾದ ಗ್ರಂಥವಾಗಿದೆ.
ಅವರು (ಪ್ರವಾದಿ) ನಮ್ಮ ಮೇಲೆ ಕೆಲವು (ಸುಳ್ಳು) ಮಾತುಗಳನ್ನು ಆರೋಪಿಸುತ್ತಿದ್ದರೆ,
ನಾವು ಅವರನ್ನು ಬಲಗೈಯಿಂದ ಹಿಡಿಯುತ್ತಿದ್ದೆವು.
ನಂತರ ನಾವು ಅವರ ಅಪಧಮನಿಯನ್ನು ಕತ್ತರಿಸುತ್ತಿದ್ದೆವು.
ಆಗ ಅವರನ್ನು (ನಮ್ಮಿಂದ) ತಡೆಯುವವರು ನಿಮ್ಮಲ್ಲಿ ಯಾರೂ ಇರಲಾರರು.
ನಿಶ್ಚಯವಾಗಿಯೂ ಇದು ದೇವಭಯವುಳ್ಳವರಿಗೆ ಒಂದು ಉಪದೇಶವಾಗಿದೆ.
ನಿಶ್ಚಯವಾಗಿಯೂ ನಿಮ್ಮಲ್ಲಿ ಇದನ್ನು ನಿಷೇಧಿಸುವವರಿದ್ದಾರೆಂದು ನಮಗೆ ಬಹಳ ಚೆನ್ನಾಗಿ ತಿಳಿದಿದೆ.
ನಿಶ್ಚಯವಾಗಿಯೂ ಅದು (ನಿಷೇಧಿಸುವುದು) ಸತ್ಯನಿಷೇಧಿಗಳ ವಿಷಾದಕ್ಕೆ ಕಾರಣವಾಗಲಿದೆ.
ನಿಶ್ಚಯವಾಗಿಯೂ ಅದು ಖಚಿತ ಸತ್ಯವಾಗಿದೆ.
ಆದ್ದರಿಂದ ನೀವು ಪರಮೋಚ್ಛನಾದ ನಿಮ್ಮ ಪರಿಪಾಲಕನ (ಅಲ್ಲಾಹನ) ಹೆಸರಿನಿಂದ ಅವನ ಪರಿಶುದ್ಧಿಯನ್ನು ಕೊಂಡಾಡಿರಿ.