ಸಂಭವಿಸಲಿರುವ ಶಿಕ್ಷೆಯ ಬಗ್ಗೆ ಕೇಳುಗನೊಬ್ಬನು ಕೇಳಿದನು.
അൽ മആരിജ് المعارج Al-Maarij
സൂറത്ത് അൽ മആരിജ് (Al-Maarij), ഖുർആൻ അധ്യായം 70 — അറബി ആയത്തുകളും ಕನ್ನಡ വിവർത്തനവും ഉൾപ്പെടെ 44 ആയത്തുകൾ വായിക്കുക. Read Surah Al-Maarij with Arabic text and ಕನ್ನಡ translation.
ಸತ್ಯನಿಷೇಧಿಗಳಿಗೆ (ಸಂಭವಿಸುವ ಶಿಕ್ಷೆ). ಅದನ್ನು ನಿವಾರಿಸುವವರಾರೂ ಇಲ್ಲ.
ಆರೋಹಣ ದಾರಿಗಳ ಒಡೆಯನಾದ ಅಲ್ಲಾಹನಿಂದ (ಸಂಭವಿಸಲಿರುವ ಶಿಕ್ಷೆ).
ಐವತ್ತು ಸಾವಿರ ವರ್ಷಗಳ ಗಾತ್ರವನ್ನು ಹೊಂದಿರುವ ಒಂದು ದಿನದಲ್ಲಿ ದೇವದೂತರು ಮತ್ತು ರೂಹ್ ಅವನ ಬಳಿಗೆ ಏರಿಹೋಗುತ್ತಾರೆ.
ಆದ್ದರಿಂದ ನೀವು ಉತ್ತಮ ರೀತಿಯಲ್ಲಿ ತಾಳ್ಮೆ ತೋರಿರಿ.
ನಿಶ್ಚಯವಾಗಿಯೂ ಅವರು ಅದನ್ನು ದೂರದಲ್ಲಿರುವಂತೆ ಕಾಣುತ್ತಿದ್ದಾರೆ.
ಆದರೆ ನಾವು ಅದನ್ನು ಸಮೀಪದಲ್ಲಿರುವಂತೆ ಕಾಣುತ್ತಿದ್ದೇವೆ.
ಆಕಾಶವು ಎಣ್ಣೆಯ ಮಡ್ಡಿಯಂತಾಗುವ ದಿನ.
ಪರ್ವತಗಳು ಬಣ್ಣದ ತುಪ್ಪಳದಂತಾಗುವ ದಿನ.
ಯಾವುದೇ ಒಬ್ಬ ಗೆಳೆಯನು ತನ್ನ ಆತ್ಮೀಯ ಗೆಳೆಯನ ಬಗ್ಗೆ ಕೇಳುವುದಿಲ್ಲ.
ವಾಸ್ತವವಾಗಿ ಅವರನ್ನು ಪರಸ್ಪರ ತೋರಿಸಲಾಗುವುದು. ಅಪರಾಧಿಯು ಆಶಿಸುವನು—ಅಂದಿನ ಶಿಕ್ಷೆಗೆ ಬದಲಿಯಾಗಿ ತನ್ನ ಗಂಡುಮಕ್ಕಳನ್ನು,
ತನ್ನ ಪತ್ನಿಯನ್ನು ಮತ್ತು ಸಹೋದರನನ್ನು,
ತನಗೆ ಆಶ್ರಯ ನೀಡಿದ ತನ್ನ ಕುಟುಂಬವನ್ನು,
ಮತ್ತು ಭೂಮಿಯಲ್ಲಿರುವ ಎಲ್ಲರನ್ನೂ ಪರಿಹಾರವಾಗಿ ನೀಡಿ ಅದು ತನ್ನನ್ನು ಪಾರು ಮಾಡುತ್ತಿದ್ದರೆ (ಎಷ್ಟು ಚೆನ್ನಾಗಿತ್ತು)!
ಎಂದಿಗೂ ಇಲ್ಲ! ನಿಶ್ಚಯವಾಗಿಯೂ ಅದು ಧಗಧಗಿಸುವ ಬೆಂಕಿಯಾಗಿದೆ.
ತಲೆಯ ಚರ್ಮವನ್ನು ಸುಲಿಯುವಂತಹ ಬೆಂಕಿ.
ಹಿಂದಕ್ಕೆ ಸರಿದ ಮತ್ತು ಮುಖ ತಿರುಗಿಸಿ ನಡೆದ ಎಲ್ಲರನ್ನೂ ಅದು ಕರೆಯುತ್ತದೆ.
(ಆಸ್ತಿಯನ್ನು) ಕೂಡಿಟ್ಟು ಜೋಪಾನವಾಗಿಟ್ಟವನನ್ನೂ (ಕರೆಯುತ್ತದೆ).
ನಿಶ್ಚಯವಾಗಿಯೂ ಮನುಷ್ಯನನ್ನು ಚಿಂತಾಕ್ರಾಂತನಾಗಿ ಸೃಷ್ಟಿಸಲಾಗಿದೆ.
ಅವನಿಗೆ ವಿಪತ್ತು ಸಂಭವಿಸಿದರೆ ತಾಳ್ಮೆಗೆಡುತ್ತಾನೆ.
ಅವನಿಗೆ ಆರಾಮ ದೊರೆತರೆ ಜಿಪುಣನಾಗುತ್ತಾನೆ.
ಆದರೆ ನಮಾಝ್ ನಿರ್ವಹಿಸುವವರು ಇದಕ್ಕೆ ಹೊರತಾಗಿದ್ದಾರೆ.
ಅವರು ಯಾರೆಂದರೆ ತಮ್ಮ ನಮಾಝ್ನಲ್ಲಿ ಸ್ಥಿರವಾಗಿರುವವರು.
ತಮ್ಮ ಸಂಪತ್ತಿನಲ್ಲಿ ಒಂದು ನಿಶ್ಚಿತ ಹಕ್ಕು ಇರುವವರು.
ಬೇಡುವವನಿಗೆ ಮತ್ತು (ಉಪಜೀವನ) ತಡೆಯಲ್ಪಟ್ಟವನಿಗೆ.
ಅವರು ಪ್ರತಿಫಲದ ದಿನವನ್ನು ಸತ್ಯವೆಂದು ದೃಢೀಕರಿಸುವವರು.
ಅವರು ತಮ್ಮ ಪರಿಪಾಲಕನ (ಅಲ್ಲಾಹನ) ಶಿಕ್ಷೆಯ ಬಗ್ಗೆ ಭಯಪಡುವವರು.
ನಿಶ್ಚಯವಾಗಿಯೂ ಅವರ ಪರಿಪಾಲಕನ (ಅಲ್ಲಾಹನ) ಶಿಕ್ಷೆಯು ಭಯಪಡದೇ ಇರುವಂತದ್ದಲ್ಲ.
ಅವರು ತಮ್ಮ ಗುಹ್ಯಾಂಗಗಳನ್ನು ಕಾಪಾಡಿಕೊಳ್ಳುವವರು.
ಅವರ ಪತ್ನಿಯರು ಅಥವಾ ಅವರ ಬಲಗೈಗಳು ಅಧೀನದಲ್ಲಿರಿಸಿದವರನ್ನು ಬಿಟ್ಟು. ನಿಶ್ಚಯವಾಗಿಯೂ ಅವರು ಆಕ್ಷೇಪಾರ್ಹರಲ್ಲ.
ಆದರೆ ಯಾರು ಅದಕ್ಕಿಂತ ಆಚೆಗಿರುವುದನ್ನು ಹುಡುಕುತ್ತಾರೋ ಅವರೇ ಎಲ್ಲೆ ಮೀರಿದವರು.
ಅವರು ತಮ್ಮ ವಿಶ್ವಾಸಾರ್ಹತೆಗಳನ್ನು ಮತ್ತು ಕರಾರುಗಳನ್ನು ಪಾಲಿಸುವವರು.
ಅವರು ತಮ್ಮ ಸಾಕ್ಷಿಗಳಲ್ಲಿ ನೇರವಾಗಿ ನಿಲ್ಲುವವರು.
ಅವರು ತಮ್ಮ ನಮಾಝ್ಗಳನ್ನು ಸಂರಕ್ಷಿಸುವವರು.
ಅವರು ಸ್ವರ್ಗಗಳಲ್ಲಿ ಗೌರವಿಸಲ್ಪಡುವರು.
ಸತ್ಯನಿಷೇಧಿಗಳಿಗೇನಾಗಿದೆ? ಅವರೇಕೆ ನಿಮ್ಮ ಕಡೆಗೆ ಅವಸರದಿಂದ ಬರುತ್ತಿದ್ದಾರೆ?
ಗುಂಪು ಗುಂಪಾಗಿ ಬಲಭಾಗದಿಂದ ಮತ್ತು ಎಡಭಾಗದಿಂದ?[1]
ತನ್ನನ್ನು ಸುಖಸಮೃದ್ಧವಾದ ಸ್ವರ್ಗಕ್ಕೆ ಪ್ರವೇಶ ಮಾಡಿಸಬೇಕೆಂದು ಅವರಲ್ಲಿ ಪ್ರತಿಯೊಬ್ಬನೂ ಹಾರೈಸುತ್ತಾನೆಯೇ?
ಎಂದಿಗೂ ಇಲ್ಲ; ನಾವು ಅವರನ್ನು ಅವರು ತಿಳಿದಿರುವ ವಸ್ತುವಿನಿಂದಲೇ ಸೃಷ್ಟಿಸಿದ್ದೇವೆ.
ಆದ್ದರಿಂದ ನಾನು ಪೂರ್ವಗಳ ಮತ್ತು ಪಶ್ಚಿಮಗಳ ಪರಿಪಾಲಕನ (ಅಲ್ಲಾಹನ) ಮೇಲೆ ಆಣೆ ಮಾಡುತ್ತೇನೆ. ನಿಶ್ಚಯವಾಗಿಯೂ ನಮಗೆ ಸಾಮರ್ಥ್ಯವಿದೆ.
ಅವರ ಬದಲಿಗೆ ಅವರಿಗಿಂತ ಶ್ರೇಷ್ಟರನ್ನು ತರಲು. ನಮ್ಮನ್ನು ಯಾರಿಗೂ ಸೋಲಿಸಲಾಗದು.
ಆದ್ದರಿಂದ ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿ. ಅವರು ಅನಗತ್ಯ ಮಾತುಗಳಲ್ಲಿ ಮತ್ತು ಆಟದಲ್ಲಿ ಮಗ್ನರಾಗಲಿ. ಎಲ್ಲಿಯವರೆಗೆಂದರೆ, ಅವರಿಗೆ ವಾಗ್ದಾನ ಮಾಡಲಾಗುವ ಆ ದಿನವನ್ನು ಅವರು ಭೇಟಿಯಾಗುವ ತನಕ.
ಅವರು ಸಮಾಧಿಗಳಿಂದ ತರಾತುರಿಯಲ್ಲಿ ಹೊರಟುಬರುವ ದಿನ! ಅವರು ಒಂದು ಗುರಿಯೆಡೆಗೆ ವೇಗವಾಗಿ ಸಾಗುವಂತೆ.
ಅವರ ಕಣ್ಣುಗಳು ತಗ್ಗಿಕೊಂಡಿರುವುವು. ಅವಮಾನವು ಅವರನ್ನು ಆವರಿಸಿಕೊಳ್ಳುವುದು. ಅದೇ ಅವರಿಗೆ ವಾಗ್ದಾನ ಮಾಡಲಾಗುತ್ತಿದ್ದ ದಿನ.